
ದಕ್ಷಿಣ ಕಾಶಿಯತ್ತ ಭಕ್ತರ ದಂಡು : ಕಾಲಕಾಲೇಶ್ವರ ರಥೋತ್ಸವ ಇಂದು
ದಕ್ಷಿಣ ಕಾಶಿಯತ್ತ ಭಕ್ತರ ದಂಡು
ದೇವರಿಗೆ ದವನ ಅರ್ಪಿಸಿ ಭಕ್ತಿ ಸಮರ್ಪಣೆ
ಕಾಲಕಾಲೇಶ್ವರ ರಥೋತ್ಸವ ಇಂದು
ಜನಧ್ವನಿ ಕನ್ನಡ ಸುದ್ದಿಮೂಲ ಗಜೇಂದ್ರಗಡ:
ಸೀತಲ ಓಲೇಕಾರ.
ಗಜೇಂದ್ರಗಡ: ದಕ್ಷಿಣ ಕಾಶಿ ಎಂದೇ ಪ್ರಸಿದ್ದಿ ಪಡೆದ ಶ್ರೀ ಕಾಲಕಾಲೇಶ್ವರ ದೇವರ ಜಾತ್ರಾ ಮಹೋತ್ಸವ ಏ. 12ರಂದು ಜರುಗಲಿದೆ.
ಕಾಲಕಾಲೇಶ್ವರ ಜಾತ್ರೆಗೂ ಘಮಘಮಿಸುವ ದವನ ಸಸ್ಯಕ್ಕೂ ಪಾರಂಪರಿಕ ಸಂಬಂಧವಿದ್ದು, ದವನದ ಹುಣ್ಣಿಮೆ ದಿನ ನಡೆಯುವ ಜಾತ್ರಾ ರಥೋತ್ಸವದಲ್ಲಿ ಭಕ್ತರು ದವನ ಸಸ್ಯವನ್ನು ದೇವರಿಗೆ ಅರ್ಪಿಸಿ ಭಕ್ತಿ ಸಮರ್ಪಿಸುತ್ತಾರೆ.
ಪ್ರಕೃತಿ ನಿರ್ಮಿತ ಸೌಂದರ್ಯದ ಮಡಿಲಲ್ಲಿ ಕಂಗೊಳಿಸುವ ರುದ್ರರಮಣೀಯ ಬೆಟ್ಟದ ತುದಿಯಲ್ಲಿ ಲಿಂಗ ಸ್ವರೂಪಿ ಶ್ರೀ ಕಾಲಕಾಲೇಶ್ವರ ತ್ರಿಕಾಲ ಪೂಜಿತ. ಏ.12 ರಂದು ತೇರು ಎಳೆದ ಬಳಿಕ ಘಮಘಮಿಸುವ ಸುವಾಸನೆ ಭರಿತ ದವನ ಸಸ್ಯವನ್ನು ದೇವರಿಗೆ ಸಮರ್ಪಿಸಿ ಮುಡಿದು ಕೊಳ್ಳುವುದು ಜಾತ್ರೆಯ ಸಂಪ್ರದಾಯವಾಗಿದೆ. ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ಕೆಲ ರೈತರ ತೋಟದಲ್ಲಿ ಬೆಳೆಯುವ ದವನ ಸಸ್ಯ ಕಿತ್ತು ಈಗ ಜಾತ್ರೆಯಲ್ಲಿ ಮಾರಾಟ ಮಾಡಲುಸಿದ್ಧತೆ ನಡೆಸಿದ್ದಾರೆ. ಸಂಜೆ ಆಕಾಶದಲ್ಲಿ ನಕ್ಷತ್ರ ಕಂಡ ಬಳಿಕ ದೇಗುಲದ ಧರ್ಮದರ್ಶಿ ಶ್ರೀಮಂತ ಯಶರಾಜ್ ಘೋರ್ಪಡೆ ಅವರು ತುಪಾಕಿ ಹಾರಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡುತ್ತಾರೆ. ಮರುದಿನ ಅಶ್ವ ವಾಹನದ ಮೂಲಕ ಉತ್ಸವ ಕನ್ಯಾ ಒಪ್ಪಿಸುವ, ಕುಂಕುಮ, ಗುಲಾಲು, ಅರಿಶಿಣ, ತೊಟ್ಟಿಲು ಸೇವೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ಜರುಗಲಿವೆ.
ಸುಗಮ ಸಂಚಾರ:
ಈ ಜಾತ್ರೆಗೆ ಬೇರೆ ರಾಜ್ಯಗಳಿಂದಲೂ ಭಕ್ತರು ಬರುವುದರಿಂದ ಪೊಲೀಸ್ ಇಲಾಖೆ ಅಗತ್ಯ ಭದ್ರತೆ ಕೈಗೊಂಡಿದೆ. 100 ಜನ , ಪೇದೆಗಳು, 15 ಎ.ಎಸ್.ಐ ಗಳು1 ಡಿ.ಆರ್. ತುಕಡಿಗಳನ್ನು ನಿಯೋಜಿಸಲಾಗಿದೆ. ಹಾಗೂ ವಾಹನಗಳ ದಟ್ಟಣೆಯಾಗುವುದರಿಂದ ರಾಜೂರಿನಿಂದ ಹಾಗೂ ಪಂಪ್ಹೌಸ್ ಮುಖಾಂತರ ಕಾಲಕಾಲೇಶ್ವರಕ್ಕೆ ತೆರಳಲು ಅವಕಾಶ ಕಲ್ಪಿಸಲಾಗಿದೆ ಎಂದು ಪಿಎಸ್ಐ ಸೋಮನಗೌಡ ಗೌಡ್ರ ಮಾಹಿತಿ ನೀಡಿದ್ದಾರೆ.